ಶ್ರೀ ವಜ್ರೇಶ್ವರಿ ಯೋಗಿನಿ ದೇವಿ ಮಂದಿರವು ವಜ್ರೇಶ್ವರಿ ದೇವಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಇದು ಮುಂಬೈನಿಂದ ೭೫ ಕಿಮೀ ದೂರದಲ್ಲಿರುವ ವಜ್ರೇಶ್ವರಿ ಪಟ್ಟಣದಲ್ಲಿದೆ. ಮೊದಲು ವಡ್ವಾಲಿ ಎಂದು ಕರೆಯಲ್ಪಡುತ್ತಿದ್ದ ಪಟ್ಟಣವನ್ನು ದೇವಾಲಯದ ಪ್ರಧಾನ ದೇವತೆಯ ಗೌರವಾರ್ಥವಾಗಿ ವಜ್ರೇಶ್ವರಿ ಎಂದು ಮರುನಾಮಕರಣ ಮಾಡಲಾಯಿತು. == ಸ್ಥಳ == ವಜ್ರೇಶ್ವರಿ ಪಟ್ಟಣವು ತಾನ್ಸಾ ನದಿಯ ದಡದಲ್ಲಿದೆ. ಇದು ಭಿವಂಡಿ ನಗರ, ಥಾಣೆ ಜಿಲ್ಲೆ, ಮಹಾರಾಷ್ಟ್ರದಲ್ಲಿದೆ. ಇದು ಪಶ್ಚಿಮ ರೈಲ್ವೇ ಮಾರ್ಗದಲ್ಲಿರುವ ವಿರಾರ್‌ನ 27.6 ಕಿಮೀ ದೂರ ಮತ್ತು ಸೆಂಟ್ರಲ್ ರೈಲ್ವೇ ಮಾರ್ಗದಲ್ಲಿರುವ ಖಡವಲಿಯ ನಿಲ್ದಾಣದಿಂದ 31ಕಿ.ಮೀ ದೂರದಲ್ಲಿದೆ . ಈ ದೇವಾಲಯವು ವಜ್ರೇಶ್ವರಿ ಪಟ್ಟಣದ ಅಂಚೆ ಕಚೇರಿಯ ಸಮೀಪದಲ್ಲಿದೆ. ಇದು ಜ್ವಾಲಾಮುಖಿ ಸ್ಫೋಟದಿಂದ ರೂಪುಗೊಂಡ ಮತ್ತು ಎಲ್ಲಾ ಕಡೆ ಬೆಟ್ಟಗಳಿಂದ ಆವೃತವಾದ ಮಂದಗಿರಿ ಬೆಟ್ಟದ ಮೇಲೆ ಇದೆ. == ದಂತಕಥೆಗಳು == ಪುರಾಣಗಳು ವಡ್ವಾಲಿ ಪ್ರದೇಶವನ್ನು ವಿಷ್ಣು ದೇವರ ಅವತಾರಗಳಾದ ರಾಮ ಮತ್ತು ಪರಶುರಾಮರು ಭೇಟಿ ನೀಡಿದ ಸ್ಥಳವೆಂದು ಉಲ್ಲೇಖಿಸುತ್ತವೆ. ದಂತಕಥೆಯ ಪ್ರಕಾರ ಪರಶುರಾಮನು ವಡ್ವಾಲಿಯಲ್ಲಿ ಯಜ್ಞ ಮಾಡಿದನು ಮತ್ತು ಆ ಪ್ರದೇಶದಲ್ಲಿನ ಜ್ವಾಲಾಮುಖಿ ಬೂದಿಯ ಬೆಟ್ಟಗಳು ಆ ಯಜ್ಞದ ಅವಶೇಷಗಳಾಗಿವೆ. ದೇವಾಲಯದ ಪ್ರಾಥಮಿಕ ದೇವತೆಯಾದ ವಜ್ರೇಶ್ವರಿ ಯನ್ನು ವಜ್ರಬಾಯಿ ಮತ್ತು ವಜ್ರಯೋಗಿನಿ ಎಂದೂ ಕರೆಯುತ್ತಾರೆ. ಇವಳನ್ನು ಭೂಮಿಯ ಮೇಲಿನ ಪಾರ್ವತಿ ಅಥವಾ ಆದಿ-ಮಾಯಾ ದೇವತೆಯ ಅವತಾರವೆಂದು ಪರಿಗಣಿಸಲಾಗುತ್ತದೆ. ಅವಳ ಹೆಸರಿನ ಅರ್ಥ " ವಜ್ರದ ಮಹಿಳೆ ( ಗುಡುಗು )" ಎಂದರ್ಥ. ದೇವಿಯ ಮೂಲದ ಬಗ್ಗೆ ಎರಡು ದಂತಕಥೆಗಳಿವೆ, ಎರಡೂ ವಜ್ರದೊಂದಿಗೆ ಸಂಬಂಧಿಸಿವೆ. ===== ಮೊದಲ ದಂತಕತೆ ===== ಕಲಿಕಲ ಅಥವಾ ಕಲಿಕುಟ್ ಎಂಬ ರಾಕ್ಷಸ (ರಾಕ್ಷಸ) ವಡ್ವಾಲಿ ಪ್ರದೇಶದಲ್ಲಿ ಋಷಿಗಳು ಮತ್ತು ಮಾನವರನ್ನು ತೊಂದರೆಗೊಳಿಸುತ್ತಿದ್ದನು ಮತ್ತು ದೇವತೆಗಳ ವಿರುದ್ಧ ಯುದ್ಧ ಮಾಡುತ್ತಿದ್ದನು. ಇದರಿಂದ ದುಃಖಿತರಾದ ದೇವತೆಗಳು ಮತ್ತು ಋಷಿಗಳು ವಸಿಷ್ಠ ಮಹರ್ಷಿಗಳ ನೇತೃತ್ವದಲ್ಲಿ ದೇವಿಯನ್ನು ಮೆಚ್ಚಿಸಲು ತ್ರಿಚಂಡಿ ಯಜ್ಞವನ್ನು ಮಾಡಿದರು. ಆದರೆ ಈ ಯಜ್ಞದಲ್ಲಿ ಇಂದ್ರನಿಗೆ ಆಹುತಿ (ಯಜ್ಞದಲ್ಲಿ ತುಪ್ಪದ ಅರ್ಪಣೆ) ನೀಡಲಾಗಲಿಲ್ಲ. ಇದರಿಂದ ಕೋಪಗೊಂಡ ಇಂದ್ರನು ತನ್ನ ವಜ್ರವನ್ನು(ಹಿಂದೂ ಪುರಾಣಗಳಲ್ಲಿನ ಅತ್ಯಂತ ಶಕ್ತಿಶಾಲಿ ಆಯುಧಗಳಲ್ಲಿ ಒಂದು) ಯಜ್ಞದ ಮೇಲೆ ಎಸೆದನು. ಭಯಭೀತರಾದ ದೇವತೆಗಳು ಮತ್ತು ಋಷಿಗಳು ತಮ್ಮನ್ನು ರಕ್ಷಿಸುವಂತೆ ದೇವಿಯನ್ನು ಪ್ರಾರ್ಥಿಸಿದರು. ದೇವಿಯು ಆ ಸ್ಥಳದಲ್ಲಿ ತನ್ನ ಎಲ್ಲಾ ವೈಭವದಲ್ಲಿ ಕಾಣಿಸಿಕೊಂಡಳು ಮತ್ತು ವಜ್ರವನ್ನು ನುಂಗಿ ಇಂದ್ರನನ್ನು ವಿನಮ್ರಗೊಳಿಸಿದಳು. ಮಾತ್ರವಲ್ಲದೆ ರಾಕ್ಷಸರನ್ನು ಕೊಂದಳು. ದೇವಿಯು ವಡ್ವಾಲಿ ಪ್ರದೇಶದಲ್ಲಿ ನೆಲೆಸುವಂತೆ ಮತ್ತು ವಜ್ರೇಶ್ವರಿ ಎಂದು ಕರೆಯಲ್ಪಡಬೇಕೆಂದು ರಾಮನು ವಿನಂತಿಸಿದನು. ಹೀಗಾಗಿ, ಈ ಪ್ರದೇಶದಲ್ಲಿ ವಜ್ರೇಶ್ವರಿ ದೇವಾಲಯವನ್ನು ಸ್ಥಾಪಿಸಲಾಯಿತು. === ಎರಡನೆಯ ದಂತಕತೆ === ವಜ್ರೇಶ್ವರಿ ಮಾಹಾತ್ಮ್ಯದಲ್ಲಿನ ಮತ್ತೊಂದು ದಂತಕಥೆಯು ಇಂದ್ರ ಮತ್ತು ಇತರ ದೇವತೆಗಳು ಪಾರ್ವತಿ ದೇವಿಯ ಬಳಿಗೆ ಹೋಗಿ ಕಲಿಕಾಲ ಎಂಬ ರಾಕ್ಷಸನನ್ನು ಕೊಲ್ಲಲು ಸಹಾಯ ಮಾಡಲು ವಿನಂತಿಸಿದರು ಎಂದು ಹೇಳುತ್ತದೆ. ಪಾರ್ವತಿ ದೇವಿಯು ಸರಿಯಾದ ಸಮಯದಲ್ಲಿ ಅವರ ಸಹಾಯಕ್ಕೆ ಬರುವುದಾಗಿ ಭರವಸೆ ನೀಡಿದಳು ಮತ್ತು ರಾಕ್ಷಸನೊಂದಿಗೆ ಯುದ್ಧ ಮಾಡಲು ಆದೇಶಿಸಿದಳು. ಯುದ್ಧದಲ್ಲಿ, ಕಲಿಕಾಲ ತನ್ನ ಮೇಲೆ ಎಸೆದ ಎಲ್ಲಾ ಆಯುಧಗಳನ್ನು ನುಂಗಿದನು ಅಥವಾ ಮುರಿದನು. ಅಂತಿಮವಾಗಿ ಇಂದ್ರನು ರಾಕ್ಷಸನ ಮೇಲೆ ವಜ್ರ(ವಜ್ರಾಯುಧ)ವನ್ನು ಎಸೆದನು. ಅದನ್ನೂ ಕಲಿಕಾಲನು ತುಂಡುಗಳಾಗಿ ಮುರಿದನು. ಆ ತುಂಡುಗಳಿಂದ ರಾಕ್ಷಸನನ್ನು ನಾಶಪಡಿಸುವ ದೇವಿಯು ಹೊರಹೊಮ್ಮಿದಳು. ಕಲಿಕಾಲನನ್ನು ಸಂಹರಿಸಿದ ಈ ದೇವಿಯನ್ನು ದೇವತೆಗಳು ವಜ್ರೇಶ್ವರಿ ಎಂದು ಕೊಂಡಾಡಿದರು ಮತ್ತು ಅವಳ ದೇವಾಲಯವನ್ನು ನಿರ್ಮಿಸಿದರು. ನವನಾಥ ಕಥಾಸರದ ಏಳನೇ ಖಂಡವು ಮಚೀಂದ್ರನಾಥನು ವಜ್ರಭಗವತಿ (ವಜ್ರೇಶ್ವರಿ) ದೇವಿಗೆ ಬಿಸಿನೀರಿನ ಸ್ನಾನವನ್ನು ನೀಡುವ ಮೂಲಕ ಒಂದು ತಿಂಗಳ ಕಾಲ ಸೇವೆ ಸಲ್ಲಿಸಿದನು ಎಂದು ಹೇಳುತ್ತದೆ. ಈ ಸ್ಥಳವನ್ನು ನಾಥ ಭೂಮಿ ಎಂದೂ ಕರೆಯುತ್ತಾರೆ, ಇದು ನಾಥರ ನಾಡು. == ಇತಿಹಾಸ == ವಜ್ರೇಶ್ವರಿಯ ಮೂಲ ದೇವಾಲಯವು ವಡವಲಿಯಿಂದ ಐದು ಮೈಲಿಗಳ ಉತ್ತರದಲ್ಲಿರುವ ಗುಂಜ್‌ನಲ್ಲಿತ್ತು (ವಡವಲಿಗೂ ಗುಂಜ್ ಪ್ರದೇಶಕ್ಕೂ 8 ಕಿಮೀ ದೂರ) . ಪೋರ್ಚುಗೀಸರಿಂದ ನಾಶವಾದ ನಂತರ ಇದನ್ನು ವಡ್ವಾಲಿಗೆ ಸ್ಥಳಾಂತರಿಸಲಾಯಿತು. 1739 ರಲ್ಲಿ, ಚಿಮಾಜಿ ಅಪ್ಪಾ - ಪೇಶ್ವೆ ಬಾಜಿ ರಾವ್ ರ ಕಿರಿಯ ಸಹೋದರ ಮತ್ತು ಮಿಲಿಟರಿ ಕಮಾಂಡರ್ - ಪೋರ್ಚುಗೀಸರ ಹಿಡಿತದಲ್ಲಿರುವ ವಸಾಯಿಯ ಬಸ್ಸೇನ್ ಕೋಟೆಯನ್ನು ವಶಪಡಿಸಿಕೊಳ್ಳುವ ಮಾರ್ಗದಲ್ಲಿ ವಡ್ವಾಲಿ ಪ್ರದೇಶದಲ್ಲಿ ಶಿಬಿರವನ್ನು ಸ್ಥಾಪಿಸಿದ್ದರು. ಆದರೆ ಮೂರು ವರ್ಷಗಳ ಯುದ್ಧದ ನಂತರವೂ ಕೋಟೆಯನ್ನು ಜಯಿಸಲಾಗಲಿಲ್ಲ. ಕೋಟೆಯನ್ನು ವಶಪಡಿಸಿಕೊಂಡು ಪೋರ್ಚುಗೀಸರನ್ನು ಸೋಲಿಸಲು ಸಾಧ್ಯವಾದರೆ, ಆಕೆಗೆ ದೇವಾಲಯವನ್ನು ನಿರ್ಮಿಸುವುದಾಗಿ ಚಿಮಾಜಿ ಅಪ್ಪಾ ವಜ್ರೇಶ್ವರಿ ದೇವಿಗೆ ಪ್ರಾರ್ಥಿಸಿದರು. ದಂತಕಥೆಯ ಪ್ರಕಾರ, ವಜ್ರೇಶ್ವರಿ ದೇವಿಯು ಅವನ ಕನಸಿನಲ್ಲಿ ಕಾಣಿಸಿಕೊಂಡಳು ಮತ್ತು ಕೋಟೆಯನ್ನು ಹೇಗೆ ವಶಪಡಿಸಿಕೊಳ್ಳಬೇಕೆಂದು ತಿಳಿಸಿದಳು. ಮೇ 16 ರಂದು, ಕೋಟೆಯು ಕುಸಿಯಿತು ಮತ್ತು ವಸೈನಲ್ಲಿ ಪೋರ್ಚುಗೀಸರ ಸೋಲು ಪೂರ್ಣಗೊಂಡಿತು. ತನ್ನ ವಿಜಯವನ್ನು ಆಚರಿಸಲು ಮತ್ತು ವಜ್ರೇಶ್ವರಿ ದೇವಿಯ ಮುಂದೆ ಮಾಡಿದ ಪ್ರತಿಜ್ಞೆಯನ್ನು ಪೂರೈಸಲು, ಚಿಮ್ನಾಜಿ ಅಪ್ಪಾ ಅವರು ವಜ್ರೇಶ್ವರಿ ದೇವಸ್ಥಾನವನ್ನು ನಿರ್ಮಿಸಲು ಹೊಸ ಸುಭೇದರ್ (ಗವರ್ನರ್), ಶಂಕರ ಕೇಶವ್ ಫಡ್ಕೆ ಅವರಿಗೆ ಆದೇಶಿಸಿದರು. ಮುಖ್ಯ ಪ್ರವೇಶ ದ್ವಾರದಲ್ಲಿರುವ ನಾಗರಖಾನಾವನ್ನು ಬರೋಡಾದ ಮರಾಠ ರಾಜವಂಶದ ಗಾಯಕ್ವಾಡ್‌ಗಳು ನಿರ್ಮಿಸಿದರು. ದೇವಾಲಯಕ್ಕೆ ಹೋಗುವ ಕಲ್ಲಿನ ಮೆಟ್ಟಿಲುಗಳು ಮತ್ತು ದೇವಾಲಯದ ಮುಂಭಾಗದಲ್ಲಿರುವ ದೀಪಮಾಲಾ (ದೀಪಗಳ ಗೋಪುರ) ನಾಸಿಕ್‌ನ ಲೇವಾದೇವಿಗಾರ ನಾನಾಸಾಹೇಬ್ ಚಂದವಾಡಕರ್ ನಿರ್ಮಿಸಿದನು. == ದೇವಾಲಯದ ರಚನೆ == ಮುಖ್ಯ ದ್ವಾರದ ಪ್ರವೇಶದ್ವಾರವು ನಾಗರಖಾನಾ ಅಥವಾ ಡ್ರಮ್ ಹೌಸ್ ಅನ್ನು ಹೊಂದಿದೆ ಮತ್ತು ಇದನ್ನು ಬಸ್ಸೇನ್ ಕೋಟೆಯ ಪ್ರವೇಶದ್ವಾರದಂತೆಯೇ ನಿರ್ಮಿಸಲಾಗಿದೆ. ದೇವಾಲಯವು ಕೋಟೆಯಂತೆ ಕಲ್ಲಿನ ಗೋಡೆಯಿಂದ ಕೂಡಿದೆ. ಮುಖ್ಯ ದೇಗುಲವನ್ನು ತಲುಪಲು ಐವತ್ತೆರಡು ಕಲ್ಲಿನ ಮೆಟ್ಟಿಲುಗಳನ್ನು ಹತ್ತಬೇಕು. ಒಂದು ಮೆಟ್ಟಿಲ ಮೇಲೆ ಚಿನ್ನದ ಆಮೆಯನ್ನು ಕೆತ್ತಲಾಗಿದೆ ಮತ್ತು ವಿಷ್ಣುವಿನ ಆಮೆ ಅವತಾರವಾದ ಕೂರ್ಮ ಎಂದು ಪೂಜಿಸಲಾಗುತ್ತದೆ. ಮುಖ್ಯ ದೇವಾಲಯವು ಮೂರು ವಿಭಾಗಗಳನ್ನು ಹೊಂದಿದೆ: ಅವೆಂದರೆ ಮುಖ್ಯ ಒಳ ಗರ್ಭಗುಡಿ ( ಗರ್ಭ ಗೃಹ ), ಮತ್ತೊಂದು ಗರ್ಭಗುಡಿ, ಮತ್ತು ಕಂಬದ ಮಂಟಪ (ಅಸೆಂಬ್ಲಿ ಹಾಲ್). ಗರ್ಭಗೃಹದಲ್ಲಿ ಆರು ವಿಗ್ರಹಗಳಿವೆ. ವಜ್ರೇಶ್ವರಿ ದೇವಿಯ ಕುಂಕುಮ ಮೂರ್ತಿ ಇದೆ. ಅವಳ ಬಲ ಮತ್ತು ಎಡಗೈಗಳಲ್ಲಿ ಕ್ರಮವಾಗಿ ಕತ್ತಿ ಮತ್ತು ಗದೆ ಇವೆ. ಜೊತೆಗೆ ತ್ರಿಶೂಲವನ್ನೂ ನಿಲ್ಲಿಸಿದ್ದಾರೆ. ಪಕ್ಕದಲ್ಲಿರುವ ರೇಣುಕಾ ದೇವಿಯ ಮೂರ್ತಿ (ಪರಶುರಾಮನ ತಾಯಿ)ಯ ಕೈಯಲ್ಲಿ ಖಡ್ಗ ಮತ್ತು ಕಮಲಗಳಿವೆ ಸಪ್ತಶೃಂಗಿ ಮಹಾಲಕ್ಷ್ಮಿ ದೇವಿಯು ವಾಣಿಯನ್ನು ಹಿಡಿದಿದ್ದಾಳೆ. ವಜ್ರೇಶ್ವರಿ ದೇವತೆಯ ವಾಹನವಾದ ಹುಲಿ ವಜ್ರೇಶ್ವರಿ ದೇವಿಯ ಎಡಭಾಗದಲ್ಲಿವೆ. ಆಕೆಯ ಬಲಭಾಗದಲ್ಲಿ ಕಮಲ ಮತ್ತು ಕಮಂಡಲ ಹಿಡಿದಿರುವ ಕಾಳಿಕಾ (ಗ್ರಾಮ ದೇವತೆ) ದೇವತೆಯ ಮತ್ತು ಪರಶು (ಕೊಡಲಿ) ಹಿಡಿದ ಪರಶುರಾಮನ ವಿಗ್ರಹ ಇವೆ. ದೇವಿಯರು ಬೆಳ್ಳಿಯ ಆಭರಣಗಳು ಮತ್ತು ಕಿರೀಟಗಳಿಂದ ಅಲಂಕರಿಸಲ್ಪಟ್ಟಿದ್ದಾರೆ, ಅವರು ಬೆಳ್ಳಿ ಕಮಲಗಳ ಮೇಲೆ ನಿಂತಿದ್ದಾರೆ ಮತ್ತು ಬೆಳ್ಳಿಯ ಛತ್ರಿಗಳಿಂದ ಆಶ್ರಯ ಪಡೆದಿದ್ದಾರೆ. ಗರ್ಭಗೃಹದ ಹೊರಗಿನ ಗರ್ಭಗುಡಿಯಲ್ಲಿ ಗಣೇಶ, ಭೈರವ, ಹನುಮಾನ್ ಮತ್ತು ಮೊರಬ ದೇವಿಯಂತಹ ಸ್ಥಳೀಯ ದೇವತೆಗಳ ವಿಗ್ರಹಗಳಿವೆ. ಅಸೆಂಬ್ಲಿ ಹಾಲ್ ಒಂದು ಗಂಟೆಯನ್ನು ಹೊಂದಿದೆ. ಭಕ್ತರು ದೇವಾಲಯವನ್ನು ಪ್ರವೇಶಿಸುವಾಗ ಈ ಘಂಟಾನಾದ ಮಾಡುತ್ತಾರೆ. ಇಲ್ಲಿರುವ ಅಮೃತಶಿಲೆಯ ಸಿಂಹವನ್ನು ಸಹ ದೇವತೆಯ ವಾಹನವೆಂದು ನಂಬಲಾಗಿದೆ. ಸಭಾ ಭವನದ ಹೊರಗೆ ಒಂದು ಯಜ್ಞಕುಂಡದ ರಚನೆ ಇದೆ. === ಹೊರಗಿರುವ ಸಣ್ಣ ದೇಗುಲಗಳು === ದೇವಾಲಯದ ಆವರಣದಲ್ಲಿರುವ ಸಣ್ಣ ದೇವಾಲಯಗಳನ್ನು ಕಪಿಲೇಶ್ವರ ಮಹಾದೇವ ( ಶಿವ ), ದತ್ತ, ಹನುಮಾನ್ ಮತ್ತು ಗಿರಿ ಗೋಸಾವಿ ಪಂಥದ ಸಂತರಿಗೆ ಸಮರ್ಪಿಸಲಾಗಿದೆ. ಹನುಮಾನ್ ದೇಗುಲದ ಮುಂಭಾಗದಲ್ಲಿರುವ ಅಶ್ವತ್ಠ ಮರವು ಗಣೇಶನ ರೂಪವನ್ನು ಪಡೆದುಕೊಂಡಿದೆ ಮತ್ತು ಅದನ್ನು ದೇವತೆಯಾಗಿ ಪೂಜಿಸಲಾಗುತ್ತದೆ. 17 ನೇ ಶತಮಾನದ ಗಿರಿ ಗೋಸಾವಿ ಸಂತ ಗೋಧಡೆಬುವಾ ಅವರ ಸಮಾಧಿ (ಸಮಾಧಿ) ಮಂದಗಿರಿ ಬೆಟ್ಟದ ಹಿಂದೆ ಗೌತಮ್ ಬೆಟ್ಟದ ಮೇಲಿದೆ. == ದೇವಾಲಯದ ಉತ್ಸವಗಳು == ದೇವಸ್ಥಾನವು ನವರಾತ್ರಿಯನ್ನು (ಹಿಂದೂ ದೇವತೆಗಳ ಆರಾಧನೆಗೆ ಮೀಸಲಾಗಿರುವ ಒಂಬತ್ತು ರಾತ್ರಿಗಳು) ಆಚರಿಸುತ್ತದೆ. ಚೈತ್ರ (ಮಾರ್ಚ್) ಶುಕ್ಲ ಪಕ್ಷದ ಮೊದಲ ದಿನದಿಂದ ರಾಮ ನವಮಿಯ ಒಂಬತ್ತನೇ ದಿನದವರೆಗೆ ಆಚರಿಸುತ್ತಾರೆ. ಚೈತ್ರ ಮಾಸದ ಅಮವಾಸ್ಯೆಯಂದು ವಜ್ರೇಶ್ವರಿ ದೇವಿಯ ಗೌರವಾರ್ಥ ಜಾತ್ರೆ ನಡೆಯುತ್ತದೆ. ಚೈತ್ರ ಮಾಸದ ಕೃಷ್ಣಪಕ್ಷದ 14 ನೇ ದಿನದಂದು ದೇವಿಯ ವಿಧ್ಯುಕ್ತ ಪೂಜೆಯೊಂದಿಗೆ ಜಾತ್ರೆ ಪ್ರಾರಂಭವಾಗುತ್ತದೆ. ಅಮಾವಾಸ್ಯೆಯಂದು ರಾತ್ರಿ ದೀಪಗಳನ್ನು ಪೂಜಿಸಲಾಗುತ್ತದೆ. ಮರುದಿನ, ಹಿಂದೂ ತಿಂಗಳ ವೈಶಾಖದ ಮೊದಲ ದಿನ, ದೇವಿಯ ಚಿತ್ರಣವನ್ನು ಹೊತ್ತ ಪಾಲ್ಕಿ (ಪಲ್ಲಕ್ಕಿ) ಯೊಂದಿಗೆ ವಿಧ್ಯುಕ್ತ ಮೆರವಣಿಗೆಯನ್ನು ಹೊರತೆಗೆಯಲಾಗುತ್ತದೆ. ದೇವಾಲಯವು ಆಚರಿಸುವ ಇತರ ಹಬ್ಬಗಳೆಂದರೆ ಹಿಂದೂ ತಿಂಗಳ ಶ್ರಾವಣದಲ್ಲಿ ಶಿವ ಪೂಜೆ; ಕೋಜಗಿರಿ ಪೂರ್ಣಿಮಾ - ಹಿಂದೂ ತಿಂಗಳ ಅಶ್ವಿನ್ ಹುಣ್ಣಿಮೆಯ ದಿನ; ದೀಪಾವಳಿ (ದೀಪಗಳ ಹಬ್ಬ); ಹೋಳಿ (ಬಣ್ಣಗಳ ಹಬ್ಬ); ದತ್ತ ಜಯಂತಿ ( ದತ್ತ ದೇವತೆಯ ಜನ್ಮದಿನ); ಹನುಮಾನ್ ಜಯಂತಿ (ವಾನರ ದೇವರು ಹನುಮಂತನ ಜನ್ಮದಿನ) ಮತ್ತು ಗೋಧದೇಬುವಾ ಜಯಂತಿ (ಸಂತ ಗೋಧದೇಬುವಾ ಅವರ ಜನ್ಮದಿನ). == ಆಡಳಿತ == ಈ ದೇವಾಲಯವನ್ನು ಶ್ರೀ ವಜ್ರೇಶ್ವರಿ ಯೋಗಿನಿ ದೇವಿ ಸಾರ್ವಜನಿಕ ಟ್ರಸ್ಟ್ ನೋಡಿಕೊಳ್ಳುತ್ತದೆ. ಗಿರಿ ಗೋಸಾವಿ ಪಂಥದ ಸದಸ್ಯರು ಟ್ರಸ್ಟ್‌ನ ಸದಸ್ಯರಾಗಿದ್ದು, 1739 ರಲ್ಲಿ ಸ್ಥಾಪನೆಯಾದಾಗಿನಿಂದ ದೇವಾಲಯದ ಪೂಜೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದ್ದಾರೆ. == ಬಿಸಿನೀರಿನ ಬುಗ್ಗೆಗಳು == ದೇವಾಲಯದ ಐದು ಕಿಲೋಮೀಟರ್ ಸುತ್ತಳತೆಯಲ್ಲಿ ಸುಮಾರು ಇಪ್ಪತ್ತೊಂದು ಬಿಸಿನೀರಿನ ಬುಗ್ಗೆಗಳಿವೆ . ದಂತಕತೆಗಳ ಪ್ರಕಾರ ಈ ಬಿಸಿನೀರು ವಜ್ರೇಶ್ವರಿ ದೇವತೆಯಿಂದ ಕೊಲ್ಲಲ್ಪಟ್ಟ ರಾಕ್ಷಸರ ಮತ್ತು ದೈತ್ಯರ ರಕ್ತವಾಗಿದೆ. ವಿಜ್ಞಾನಿಗಳ ಪ್ರಕಾರ, ಈ ಪ್ರದೇಶದಲ್ಲಿನ ಹಿಂದಿದ್ದ ಜ್ವಾಲಾಮುಖಿಗಳು ಅವುಗಳ ಸೃಷ್ಟಿಗೆ ಕಾರಣವಾಗಿದೆ. ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳು ಸಹ ಬುಗ್ಗೆಗಳಲ್ಲಿ ಪವಿತ್ರ ಸ್ನಾನವನ್ನು ಮಾಡುತ್ತಾರೆ, ಇವುಗಳಿಗೆ ಹಿಂದೂ ದೇವತೆಗಳಾದ ಸೂರ್ಯ (ಸೂರ್ಯ-ದೇವರು), ಚಂದ್ರ (ಚಂದ್ರ-ದೇವರು), ಅಗ್ನಿ (ಅಗ್ನಿ-ದೇವರು), ವಾಯು (ಗಾಳಿ-ದೇವರು), ರಾಮ (ವಿಷ್ಣುವಿನ ಅವತಾರ), ಸೀತೆ (ರಾಮನ ಹೆಂಡತಿ ಮತ್ತು ಲಕ್ಷ್ಮಿ ದೇವಿಯ ಅವತಾರ - ವಿಷ್ಣುವಿನ ಹೆಂಡತಿ) ಮತ್ತು ಲಕ್ಷ್ಮಣ (ರಾಮನ ಸಹೋದರ) ಎಂಬ ಹೆಸರಿಡಲಾಗಿದೆ. == ವಜ್ರೇಶ್ವರಿ ದೇವಿಯ ಇತರ ದೇವಾಲಯಗಳು == ಮಹಾರಾಷ್ಟ್ರದ ವಾಡಾ ತಾಲೂಕಿನ ಗುಂಜ್ ಮತ್ತು ಕಟೈನಲ್ಲಿ ಒಂದು ಸಣ್ಣ ದೇವಾಲಯವಿದ್ದು. ಇದು ದೇವಿಯ ಮೂಲ ದೇವಾಲಯವಾಗಿದೆ. ಹಿಮಾಚಲ ಪ್ರದೇಶದಕಂಗ್ರಾದಲ್ಲಿ ಮತ್ತೊಂದು ವಜ್ರೇಶ್ವರಿ ದೇಗುಲವಿದೆ. ಇದು ಒಂದು ಶಕ್ತಿ ಪೀಠ. ಅಲ್ಲಿ ಸತಿ ದೇವಿಯ (ಶಿವನ ಮೊದಲ ಹೆಂಡತಿ, ಪಾರ್ವತಿಯಾಗಿ ಮರುಜನ್ಮ ಪಡೆದ - ಶಿವನ ನಾಮಮಾತ್ರದ ಎರಡನೇ ಹೆಂಡತಿ) ದೇಹದ ಒಂದು ಭಾಗವು ಬಿದ್ದಿತ್ತು ಎಂಬ ನಂಬಿಕೆಯಿದೆ. ಎಕ್ರುಖೆ ಗ್ರಾಮ, ಶಿರಡಿ, ಮಹಾರಾಷ್ಟ್ರದಲ್ಲಿ ವಜ್ರೇಶ್ವರಿ ದೇವಸ್ಥಾನ ಇದೆ. ಚಂಬಾ, ಹಿಮಾಚಲ ಪ್ರದೇಶದಲ್ಲಿ ವಜ್ರೇಶ್ವರಿ ದೇವಸ್ಥಾನ ಇದೆ. ಇಡಾರ್, ಗುಜರಾತ್ನಲ್ಲಿ ವಜ್ರೇಶ್ವರಿ ದೇವಸ್ಥಾನ ಇದೆ. ಇದು ಇಡಾರ್ ಪರ್ವತದ ಮೇಲೆ ಸಂಪೂರ್ಣ ಪ್ರಕೃತಿಯ ಪರಿಸರದೊಂದಿಗೆ ನೆಲೆಗೊಂಡಿದೆ . ಇದನ್ನು ಕಟ್ಟಿದವರು ಧ್ರುವ ಪಾಂಡ್ಯ. ಸೋಲ್ಪುರ, ಬೀದರ್ ಜಿಲ್ಲೆ, ಕರ್ನಾಟಕ ರಾಜ್ಯದಲ್ಲೂ ವಜ್ರೇಶ್ವರಿ ದೇವಸ್ಥಾನ ಇದೆ. == ಉಲ್ಲೇಖಗಳು == ವಜ್ರೇಶ್ವರಿ ದೇವಸ್ಥಾನದ ಬಗ್ಗೆ ವೆಬ್‌ಸೈಟ್ == ಟಿಪ್ಪಣಿಗಳು == == ಬಾಹ್ಯ ಕೊಂಡಿಗಳು == [೧] 2012-06-10 ವೇಬ್ಯಾಕ್ ಮೆಷಿನ್ ನಲ್ಲಿ. ವಜ್ರೇಶ್ವರಿ ದೇವಸ್ಥಾನ ಮುಂಬೈ